ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸಭಾಪತಿ ಮಲ್ಕಾಪುರೆ ಸೂಚನೆ

ಬೆಳಗಾವಿ: ವಿಧಾನಮಂಡಲದ ಚಳಿಗಾಲ ಅಧಿವೇಶನ ಡಿ.19 ರಿಂದ ಆರಂಭಗೊಳ್ಳಲಿದ್ದು, ಪ್ರತಿವರ್ಷದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರು ಸೂಚನೆ ನೀಡಿದರು.

promotions

ಸುವರ್ಣ ವಿಧಾನಸೌಧದಲ್ಲಿ ಭಾನುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

promotions

ಸಚಿವರು, ಶಾಸಕರು ಸೇರಿದಂತೆ ಯಾರಿಗೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ವಸತಿ ಕೊರತೆ ಕಂಡುಬಂದರೆ ಕೂಡಲೇ ವ್ಯವಸ್ಥೆ ಮಾಡಬೇಕು. ವಾಹನ ಚಾಲಕರು, ಮಾರ್ಷಲ್ ಗಳಿಗೆ ಸಮರ್ಪಕ ಊಟ ಒದಗಿಸಬೇಕು.

ಆರೋಗ್ಯ ಸೌಲಭ್ಯ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಈಗಾಗಲೇ ಸೌಲಭ್ಯ ಒದಗಿಸಲಾಗಿದ್ದು, ವೈದ್ಯಕೀಯ ತಂಡ ಸದಾ ಲಭ್ಯವಾಗಿರುವಂತೆ ಇರಬೇಕು.

ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಪರಿಷತ್ತಿನ ವತಿಯಿಂದ ಪ್ರತಿವರ್ಷದಂತೆ ಪಾಸ್ ನೀಡಲಾಗುತ್ತದೆ ಎಂದು ಮಲ್ಕಾಪುರೆ ಹೇಳಿದರು.

ಪೊಲೀಸ್ಚೆಕ್ಪೋಸ್ಟ್; ಊಟೋಪಾಹಾರವ್ಯವಸ್ಥೆ:

ಅಧಿವೇಶನದ ಹಿನ್ನೆಲೆಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿಯನ್ನು ನೀಡಿದರು.

20 ಕ್ಕೂ ಅಧಿಕ ಪೊಲೀಸ್ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಪ್ರತಿಭಟನಾ ಸ್ಥಳಗಳನ್ನು ಗುರುತಿಸಿ ಕುಡಿಯುವ ನೀರು ಮತ್ತಿತರ ಮೂಲಸೌಕರ್ಯವನ್ನು ಒದಗಿಸಲಾಗಿದೆ.

61 ಪ್ರತಿಭಟನೆ ನಡೆಸಲು ಅನುಮತಿ ಕೇಳಲಾಗಿರುತ್ತದೆ. ಸಂಬಂಧಿಸಿದ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಕಲಾಪಗಳ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸುವರ್ಣ ಸೌಧ ಪ್ರವೇಶಕ್ಕೆ ಮಾತ್ರ ಜಿಲ್ಲಾಡಳಿತದಿಂದ ಪಾಸ್ ನೀಡಲಾಗುತ್ತಿದ್ದು, ಉಳಿದಂತೆ ವಿಧಾನಸಭೆ ಹಾಗೂ ಪರಿಷತ್ ವತಿಯಿಂದ ಪಾಸ್ ನೀಡಲಾಗುತ್ತದೆ ಎಂದರು.

ಈ ಬಾರಿ ಸರಕಾರಿ ವಾಹನಗಳನ್ನು ಮಾತ್ರ ಬಳಕೆ‌ ಮಾಡಲಾಗುತ್ತಿದೆ. ಸಚಿವರು ಹಾಗೂ ಉನ್ನತ ಅಧಿಕಾರಿಗಳು ತಮಗೆ ಮೀಸಲಾದ ವಾಹನಗಳನ್ನು ಬೆಂಗಳೂರಿನಿಂದ ತರುತ್ತಿದ್ದಾರೆ ಆದ್ದರಿಂದ ಸಾರಿಗೆ ಸಮಸ್ಯೆಯಾಗುವುದಿಲ್ಲ ಎಂದರು.

ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More Articles