ಕೃಷಿ ಬದಲಾವಣೆಯಾದರೆ ದೇಶ ಅಭಿವೃದ್ಧಿ: ಹೆಬ್ಬಾಳ್ಕರ್
- 15 Jan 2024 , 2:32 AM
- Belagavi
- 143
ಬೆಳಗಾವಿ: ಕೃಷಿ ಕ್ಷೇತ್ರ ಬಲವರ್ಧನೆಗೊಂಡಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ್ಯಾಂತ ಒಟ್ಟು 19 ಜನ ಫಲಾನುಭವಿ ರೈತರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರೊಂದಿಗೆ ವಿವಿಧ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಸರಕಾರದ ವಿವಿಧ ಯೋಜನೆಗಳಡಿ ರೈತರಿಗೆ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಿಕೊಡಲು ತಾವು ಬದ್ಧರಾಗಿದ್ದು ಕೃಷಿಕರು ಅವುಗಳ ಪ್ರಯೋಜನ ಪಡೆದು ಹೆಚ್ಚಿನ ಇಳುವರಿಯೊಂದಿಗೆ ಸಮೃದ್ಧ ನಾಡು ಸೃಷ್ಟಿಸುವಲ್ಲಿ ನಿರತರಾಗಲು ಲಕ್ಷ್ಮೀ ಹೆಬ್ಬಾಳಕರ ಸಲಹೆ ನೀಡಿದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಸಾಮಗ್ರಿಗಳಾದ ಮೋಟಾರ್, ಪೈಪ್, ಇಲೆಕ್ರ್ಟಿಕ್ ಪೆಟ್ಟಿಗೆ ಹಾಗೂ ಬೋರವೆಲ್ ಗೆ ಸಂಬಂಧಪಟ್ಟ ಬಿಡಿಭಾಗಗಳನ್ನು ಈ ಸಂದರ್ಭದಲ್ಲಿ ರೈತರಿಗೆ ವಿತರಿಸಲಾಯಿತು.










