ಬೈಲಹೊಂಗಲ ನಾಡಿನ ಸಮಗ್ರ ಮಾಹಿತಿಗಾಗಿ ಸಾಂಸ್ಕೃತಿಕ ಪರಂಪರೆ ಪುಸ್ತಕ ಡಾ.ವಿಶ್ವನಾಥ ಪಾಟೀಲ
- shivaraj B
- 16 Sep 2024 , 8:31 AM
- Bailhongal
- 516
ಬೈಲಹೊಂಗಲ : ಅನೇಕ ವಿಷಯಗಳನ್ನು ಸಂಗ್ರಹಿಸಿ ಬೈಲಹೊಂಗಲ ನಾಡಿನ ಸಮಗ್ರ ಚಿತ್ರಣ ನೀಡುವ ಸಾಂಸ್ಕೃತಿಕ ಪರಂಪರೆ ಎಂಬ ಪುಸ್ತಕ ಪರಿಚಯಿಸಿದ ಪತ್ರಕರ್ತ ಸಿ.ವೈ.ಮೆನಸಿಣಕಾಯಿ ಅವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಪತ್ರಕರ್ತ ಸಿ.ವೈ.ಮೆಣಸಿನಕಾಯಿ ಅವರು ರಚಿಸಿದ ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಚಾರಿತ್ರಿಕ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಬೈಲಹೊಂಗಲ ನಾಡು ಶೂರರ ನಾಡಾಗಿದೆ. ರಾಣಿ ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಮೊದಲಾದವರು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ, ತ್ಯಾಗ ಮಾಡಿದ ಮಹನೀಯರು, ಸಾಹಿತ್ಯ ಸೇವೆ ಮಾಡಿದ ಸತ್ಯಾರ್ಥಿ, ಎಂ.ಆರ್.ಮುಲ್ಲಾ, ಕನ್ನಡಕ್ಕೆ ಹೋರಾಡಿದ ಸಿದ್ದನಗೌಡ ಪಾಟೀಲ, ಮೂರುಸಾವಿರಮಠ, ನಾಗನೂರ ಮಠ ಹೀಗೆ ಇನ್ನೂ ಅನೇಕ ವಿಷಯಗಳನ್ನು ಕ್ರೋಡಿಕರಿಸಿ ಪುಸ್ತಕದಲ್ಲಿ ನೀಡಿ ಬೈಲಹೊಂಗಲ ನಾಡಿನ ಪರಿಚಯವನ್ನು ನೀಡಿದ್ದಾರೆ ಅವರ ಕಾರ್ಯ ಸದಾ ಹೀಗೆ ಮುಂದುವರೆಯಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ ಕೃತಿ ಪರಿಚಯಿಸಿ ಮಾತನಾಡಿ, ತಾಲೂಕಿನ ಸಮಗ್ರ ಇತಿಹಾಸವನ್ನು ಪುಸ್ತಕ ರೂಪದಲ್ಲಿ ನೀಡಿರುವ ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಕೃತಿಯು ಬಹಳ ಅರ್ಥಪೂರ್ಣವಾಗಿದೆ ಎಂದರು. ಜನತೆಗೆ ಇತಿಹಾಸ ತಿಳಿಸಬೇಕಾಗಾದಾಗ ಸತ್ಯವನ್ನೆ ಬರೆಯಬೇಕಾಗುತ್ತದೆ. ಬೈಲಹೊಂಗಲ ತಾಲೂಕಿನ ಎಲ್ಲ ಸಮೃದ್ದಿಯನ್ನು ತುಂಬಿಕೊಂಡ ನಾಡಾಗಿದೆ. ಬೈಲಹೊಂಗಲ ನಾಡು ಶೂರರು, ಧೀರರನ್ನು ಹೊಂದಿದೆ. ಇಲ್ಲಿಯ ಮಠ ಪರಂಪರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಾಮಾಜಿಕ, ರಾಜಕೀಯ ಹೀಗೆ ಇಲ್ಲಿಯ ಪ್ರತಿಯೊಂದು ವಿಷಯಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇಂದಿನ ಯುವಪೀಳಿಗೆ ಮೊಬೈಲ್ ಸಂಸ್ಕೃತಿ ಬದಿಗೊತ್ತಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಸಂಸ್ಕೃತಿ ಮರೆಯಾಗದೆ ಇನ್ನೂ ಹೆಚ್ಚಿನ ದಿನ ಉಳಿಯಬಹುದೆಂದರು.
ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ ಮಾತನಾಡಿ, ಕೇವಲ ಪತ್ರಕರ್ತರಾಗಿರದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿ ನಾಡಿನ ಇತಿಹಾಸವನ್ನು ಬರೆಯುವ ಸಾಹಸ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿ ಮೆಚ್ಚುವಂತಹುದಾಗಿದೆ ಎಂದರು.
ಮಕ್ಕಳ ಸಾಹಿತಿ ಅಣ್ಣಪೂರ್ಣಾ ಕನೋಜ ಮಾತನಾಡಿದರು.
ಕೃತಿಕಾರ ಸಿ.ವೈ.ಮೆಣಸಿನಕಾಯಿ ಮಾತನಾಡಿ, ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಎನ್ನುವ ಕೃತಿಯನ್ನು ರಚಿಸಲು ನಾನು ಸಾಕಷ್ಟು ವಿಷಯಗಳನ್ನು ಅಧ್ಯಯನ ಮಾಡಿ, ನಮ್ಮ ತಾಲೂಕಿನಲ್ಲಿ ಅಡಗಿರುವ ಹಲವು ಸಮಗ್ರ ಇತಿಹಾಸವನ್ನು ಪರಿಚರಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಸೇವೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಇದೆ ಪುಸ್ತಕವನ್ನು ಎಲ್ಲರೂ ಕೊಂಡು ಓದಬೇಕೆಂದು ಮನವಿ ಮಾಡಿದರು. ಸಿ.ವಾಯ್.ಮೆಣಸಿನಕಾಯಿ, ಪಿಎಲ್ ಡಿ ಬ್ಯಾಂಕನ ನೂತನ ಅಧ್ಯಕ್ಷ ಪರ್ವತಗೌಡ ಪಾಟೀಲರನ್ನು ಸತ್ಕರಿಸಲಾಯಿತು.
ಬಿಜೆಪಿ ತಾಲೂಕ ಅಧ್ಯಕ್ಷ ಸುಭಾಸ ತುರಮರಿ, ಬಿಜೆಪಿ ಮುಖಂಡರಾದ ಮಡಿವಾಳಪ್ಪ ಹೋಟಿ, ಪುರಸಭೆ ಸದಸ್ಯರಾದ ವಾಣಿ ಪತ್ತಾರ, ಜಗದೀಶ ಜಂಬಗಿ, ನಿಂಗಪ್ಪ ಚೌಡನ್ನವರ, ಶ್ರೀಶೈಲ ಯಡಳ್ಳಿ, ನಿವೃತ್ತ ಶಿಕ್ಷಕ ಮಹಾಬಳೇಶ್ವರ ಬೋಳನ್ನವರ, ಬಸನಗೌಡ ಸಂಗನಗೌಡರ, ಅಡಿವೆಪ್ಪ ಹೊಸಮನಿ, ಬಾಳಗೌಡ ಪಾಟೀಲ, ವಿಜಯ ಪತ್ತಾರ ಮುಂತಾದವರು ಇದ್ದರು. ಸಿದ್ದಾರೂಡ ಹೊಂಡಪ್ಪನವರ ಸ್ವಾಗತಿಸಿ, ನಿರೂಪಿಸಿದರು.
ವರದಿ : ರವಿಕಿರಣ್ ಯಾತಗೇರಿ










