
ಸರಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಪ್ರಯತ್ನ ಸಂಘಟನೆ
- 11 Jan 2024 , 12:50 PM
- Belagavi
- 364
ಬೆಳಗಾವಿ: ಕಳೆದ 12 ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಬೆಳಗಾವಿಯ ಪ್ರಯತ್ನ ಸಂಘಟನೆ ಶುಕ್ರವಾರ ಇಲ್ಲಿಯ ರಾಣಿ ಚನ್ನಮ್ಮ ನಗರದ ಹಿರಿಯ ಪ್ರಾಥಮಿಕ ಶಾಲೆಗೆ ಆಧುನಿಕ ಪರಿಕರಗಳನ್ನು ಒದಗಿಸುವ ಮೂಲಕ ಸರಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವ ಮಾದರಿ ಕೆಲಸ ಮಾಡಿತು.

ಅತ್ಯಂತ ಬಡಮಕ್ಕಳೇ ಕಲಿಯುತ್ತಿರುವ ಶಾಲೆಯಲ್ಲಿ ನಲಿ-ಕಲಿ ಮಕ್ಕಳಿಗೆ ಕುಳಿತುಕೊಳ್ಳಲು ಖುರ್ಚಿ ಹಾಗೂ ಟೇಬಲ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಲ್ಲಿರುವ ರೀತಿಯ ಸುಮಾರು 25 ಸಾವಿರ ರೂ. ಮೌಲ್ಯದ 6 ಟೇಬಲ್ ಮತ್ತು 35 ಖುರ್ಚಿಗಳನ್ನು ಪ್ರಯತ್ನ ಸಂಘಟನೆ ಈ ಶಾಲೆಗೆ ದೇಣಿಗೆ ನೀಡಿತು. ಜೊತೆಗೆ ಮಕ್ಕಳಿಗೆ ಬಟ್ಟೆ, ಬಿಸ್ಕಿಟ್, ಚಾಕಲೇಟ್ ಗಳನ್ನು ಸಹ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ, ಸರಕಾರಿ ಶಾಲೆಗಳು ಸರಿಯಾದ ಸೌಲಭ್ಯ ಮತ್ತು ಪರಿಕರಗಳಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ಪ್ರಯತ್ನದಿಂದ ಈಗಾಗಲೆ ಇಂತಹ ಹಲವು ಶಾಲೆಗಳಿಗೆ, ಶಾಲೆಯ ಬಡ ಮಕ್ಕಳಿಗೆ ಸಹಾಯ ಮಾಡಲಾಗಿದೆ. ಸಾರ್ವಜನಿಕರು, ಸಂಘಸಂಸ್ಥೆಗಳು ಹೆಚ್ಚಿನ ಸಹಾಯಕ್ಕೆ ಮುಂದೆ ಬರಬೇಕು.ಚನ್ನಮ್ಮ ನಗರ ಶಾಲೆಗೆ ಖುರ್ಚಿ, ಟೇಬಲ್ ಅವಶ್ಯಕತೆ ಇರುವ ಕುರಿತು ಪ್ರಯತ್ನ ಸದಸ್ಯೆಯೂ ಆಗಿರುವ ಶಿಕ್ಷಕಿ ಶುಭಾ ಭಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ವಸ್ತುಗಳನ್ನು ದೇಣಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹ ಶಾಲೆಗೆ ಹೆಚ್ಚಿನ ನೆರವು ನೀಡಲಾಗುವುದು ಎಂದರು.

ಇದೇ ವೇಳೆ ಗಾಯತ್ರಿ ರಜಪೂತ ಅವರು ಮಕ್ಕಳಿಗೆ ಸ್ವೇಟರ್ ಗಳನ್ನು ನೀಡಿದರು. ಶಿಕ್ಷಕರ ಸಂಘದ ಜಿಲ್ಲಾ ಅಧ್ಕ್ಷಕ್ಷ ಬಾಬು ಸೊಗಲಣ್ಣವರ್, ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಹೈಬತ್ತಿ, ಸಮಾಜ ಸೇವಕಿ ಶೀಲಾ ದೇಶಪಾಂಡೆ, ಸಾರಂಗ ರಾಗೋಚೆ ಮೊದಲಾದವರು ಮಾತನಾಡಿದರು.
ಹಿರಿಯ ನಾಗರಿಕರಾದ ಚಿಕ್ಕೋರ್ಡೆ, ಗಂಗಾಧರ ಮುಳ್ಳೋಳಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ ಗೋಕಾಕ, ಉಪಾಧ್ಯಕ್ಷ ಮಲ್ಲಪ್ಪ ಮಿಜ್ಜಿ, ಪ್ರಯತ್ನ ಸದಸ್ಯರಾದ ಶ್ವೇತಾ ಭಟ್, ಸಂಗೀತಾ ಪಾಟೀಲ, ಬೀನಾ ರಾವ್, ಮಂಗಳಾ ಧಾರವಾಡಕರ್, ಹೇಮಾ ಮುತಾಲಿಕ, ಗೌರಿ ಸರ್ನೋಬತ್, ಶ್ವೇತಾ ಬಿಜಾಪುರೆ, ವರದಾ ಭಟ್, ಶೋಭಾ ರಘುನಾಥ, ಸುನೀತಾ ಭಟ್, ಶುಭಾ ಕಡಗದಕೈ, ಲತಾ ಕಟ್ಟಿ, ರವಿ ಆಚಾರ್ಯ, ಬಿ.ಎಸ್.ಪಾಟೀಲ, ನವೀನ್ ಭಟ್ ಮೊದಲಾದವರಿದ್ದರು.
ಮುಖ್ಯಾಧ್ಯಾಪಕ ಬಿ.ಎಫ್. ನದಾಫ್ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ವಿ.ಎಂ. ಬೇವಿನಕೊಪ್ಪಮಠ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶುಭಾ ಭಟ್ ನಿರ್ವಹಿಸಿದರು. ಇನ್ನೋರ್ವ ಶಿಕ್ಷಕಿ ಸುಮಿತ್ರಾ ಯಡವಣ್ಣವರ್ ವಂದಿಸಿದರು.