ಕೋಟಿ ಕಂಠ ಗಾಯನದಲ್ಲಿ ಕನ್ನಡ ಅನುರಣನ

ಬೆಳಗಾವಿ : ಕೋಟಿಕಂಠ ಗಾಯನ  "ನನ್ನ ನಾಡು ನನ್ನ ಹಾಡು" ಕಾರ್ಯಕ್ರಮದಲ್ಲಿ   ಆರು ಹಾಡುಗಳನ್ನು ರಾಜ್ಯಾದ್ಯಂತ ಏಕ ಕಂಠದಲ್ಲಿ  ಕೋಟಿಕಂಠ ಗಾಯನದ ಮೂಲಕ ಕನ್ನಡ ಇತಿಹಾಸ ಸೃಷ್ಟಿಸಲು ನಾವೆಲ್ಲರೂ ಕೈಜೊಡಿಸೋಣ ಎಂದು ಮಹಾನಗರ ಪಾಲಿಕೆ ಅಯುಕ್ತರಾದ ರುದ್ರೇಶ ಘಾಳಿ ಅವರು ಹೇಳಿದರು. 

promotions

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ  ಜಿಲ್ಲಾ ಕ್ರೀಡಾಂಗಣದಲ್ಲಿ  ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ  ಅವರು ಮಾತನಾಡಿದರು.

promotions

ನಾಡಿನೆಲ್ಲೆಡೆ 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ, ರಾಜ್ಯದ ಮೂಲೆ ಮೂಲೆಯಲ್ಲಿ, ಗ್ರಾಮ ಗ್ರಾಮಗಳಲ್ಲಿ ಒಂದು ಕೋಟಿಗೂ ಹೆಚ್ಚು ಕಂಠಗಳಲ್ಲಿ ಕನ್ನಡ ಗಾಯನ ಮೊಳಗಲಿದೆ, ಕೋಟಿ ಕಂಠದಲ್ಲಿ ನಮ್ಮ ಕಂಠಗಳನ್ನು ಜೋಡಿಸುವ ಮೂಲಕ ಕೋಟಿ ಕಂಠ ಗಾಯನವನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಕುವೆಂಪು ವಿರಚಿತ ನಾಡಗೀತೆಯಾದ  ಜಯ ಭಾರತ ಜನನಿಯ ತನುಜಾತೆ, ಹುಯೀಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ರಚಿಸಿದ ಬಾರಿಸು ಕನ್ನಡ ಡಿಂಡಿಮ, ಡಾ.ಡಿ.ಎಸ್.ಕರ್ಕಿ ರಚಿಸಿದ ಹಚ್ಚೇವು ಕನ್ನಡ ದೀಪ, ಚನ್ನವೀರ ಕಣವಿ ರಚಿಸಿದ ವಿಶ್ವವಿನೂತನ ವಿದ್ಯಾಚೇತನ ಹಾಗೂ ಹಂಸಲೇಖ ಅವರು  ರಚಿಸಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹೀಗೆ ಒಟ್ಟು ಆರು ಕನ್ನಡ ಹಾಡುಗಳನ್ನು ಹಾಡುವ ಮೂಲಕ  67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ  ರಾಜ್ಯಾದ್ಯಂತ ಆಯೋಜಿಸಿದ ಕೋಟಿಕಂಠ ಗಾಯನ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 
ಮಹಾನಗರ ಪಾಲಿಕೆಯ ಉಪ ಆಯುಕ್ತ(ಆಡಳಿತ)ರಾದ ಭಾಗ್ಯಶ್ರೀ ರಾ. ಹುಗ್ಗಿ ಅವರು ಸ್ವಾಗತಿಸಿದರು.

ಸರ್ವಮಂಗಳ ಅರಳಿಮಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಇದಲ್ಲದೇ ಮಕ್ಕಳಿಗೆ ಸಂಕಲ್ಪ ವಿಧಿಯನ್ನು ಬೋಧಿಸಿದರು. ಕೋಟಿ ಕಂಠ ಗಾಯನದ ಮುಖ್ಯ ಗಾಯಕರಾಗಿ ನಯನಾ ಗಿರಿಗೌಡರ ಮತ್ತು ತಂಡದವರು ಭಾಗವಹಿಸಿದ್ದರು.

ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ  ಪ್ರೀತಿಮ್ ನಸಲಾಪುರೆ,  ಮಹಾನಗರ ಪಾಲಿಕೆ ಕಂದಾಯ ಉಪಾ ಆಯುಕ್ತ ಪ್ರಶಾಂತ ಹುನಗುಂದಿ, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಸಂಜಯ ಡುಮ್ಮಗೋಳ, ಟಿ.ಪಿ.ಓ ಅಧಿಕಾರಿ ಬಿ.ವಿ. ಹಿರೇಮಠ, ಬೆಳಗಾವಿ ತಹಶಿಲ್ದಾರರಾದ  ಆರ್.ಬಿ.ಕುಲಕರ್ಣಿ,  ಮಹಾನಗರ ಪಾಲಿಕೆ ಅಭಿವೃದ್ದಿ ಉಪ ಆಯುಕ್ತರಾದ ಲಕ್ಷ್ಮೀ ನಿಪ್ಪಾಣಿಕರ ಹಾಗೂ ಬೆಳಗಾವಿ ನಗರದ ಸರ್ಕಾರಿ ಮತ್ತು ಖಾಸಗಿ ಶಾಲಾ- ಕಾಲೇಜಗಳ  ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More Articles