ಕಿತ್ತೂರು ಉತ್ಸವಕ್ಕೆ 5 ಕೋಟಿ,ಬೆಳಗಾವಿ ರಾಜ್ಯೋತ್ಸವಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಲು ಕರವೇ ಆಗ್ರಹ
- Krishna Shinde
- 14 Jan 2024 , 10:34 PM
- Belagavi
- 364
ಬೆಳಗಾವಿ : ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವವನ್ನು ಬಿಂಬಿಸುವ ಕಿತ್ತೂರು ಉತ್ಸವಕ್ಕೆ ಐದು ಕೋಟಿ ರೂ ಅನುದಾನ, ಹಾಗೂ ಬೆಳಗಾವಿ ನಗರದಲ್ಲಿ ನಡೆಯುವ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ರಾಜ್ಯ ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚನ್ನಮ್ಮನ ಕಿತ್ತೂರಿನಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸುತ್ತಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳೇ ಸರ್ಕಾರದ ನಡುವಳಿಕೆಯಿಂದ ಪ್ರತಿ ವರ್ಷ ಉತ್ತರ ಕರ್ನಾಟಕದ ಜನ ರಾಜ್ಯೋತ್ಸವ ಮತ್ತು ಕಿತ್ತೂರು ಉತ್ಸವಕ್ಕಾಗಿ ಹೋರಾಟ ಮಾಡಲೇಬೇಕಾಗುತ್ತದೆ.ಸರ್ಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದೇ ಇರುವದರಿಂದ ಉತ್ಸವಗಳ ಸಿದ್ಧತೆ ಮಾಡಲು ಬೆಳಗಾವಿ ಜಿಲ್ಲಾಡಳಿತ ಪ್ರತಿ ವರ್ಷವೂ ವೇದನೆ ಅನುಭವಿಸುತ್ತಲೇ ಬಂದಿದೆ ಎಂದು ಕರವೇ ತಿಳಿಸಿದೆ.

ಸರ್ಕಾರ ಕಿತ್ತೂರು ಉತ್ಸವದ ಎರಡು ಅಥವಾ ಮೂರು ದಿನ ಮೊದಲು ಅನುದಾನ ಬಿಡುಗಡೆ ಮಾಡುತ್ತದೆ.ಇಷ್ಟೊಂದು ವಿಳಂಬವಾಗಿ,ಅಲ್ಪ ಪ್ರಮಾಣದ ಅನುದಾನವನ್ನು ಬೆಳಗಾವಿ ಜಿಲ್ಲೆಯ ಜನ ಹೋರಾಟ,ಕೂಗಾಟ,ಚೀರಾಟ ಮಾಡಿದ ಬಳಿಕವೇ ಕೊಡುತ್ತೀರಾ.ಇದು ಸರಿಯೇ ? ಎಂದು ಕರವೇ ಕೇಳಿದೆ .
ಮೈಸೂರು ದಸರಾ ಉತ್ಸವಕ್ಕೆ ಅನುದಾನ ಕೊಡಿ ಎಂದು ಅಲ್ಲಿಯ ಜನ ಎಂದಿಗೂ ಹೋರಾಟ ಮಾಡಿದ್ದನ್ನು ನಾವು ಕೇಳಿಲ್ಲ.ನೋಡಿಲ್ಲ.ಅಲ್ಲಿಯ ಜನ ಹೋರಾಟ ಮಾಡುವ ಮೊದಲೇ ಅನುದಾನ ಬಿಡುಗಡೆ ಮಾಡ್ತೀರಾ ? ಈ ತಾರತಮ್ಯ ದಿಂದ ನಾವು ನೊಂದಿದ್ದೇವೆ ನಮ್ಮ ಸಹನೆಯ ಕಟ್ಟೆ ಒಡೆಯುವ ಹೊಸ್ತಿಲಲ್ಲಿದೆ ಎಂದು ಹೇಳಿದ್ದಾರೆ.
ಕಿತ್ತೂರು ಉತ್ಸವಕ್ಕೆ ಐದು ಕೋಟಿ ರೂ, ಬೆಳಗಾವಿ ರಾಜ್ಯೋತ್ಸವಕ್ಕೆ ಎರಡು ಕೋಟಿ ರೂ ಅನುದಾನವನ್ನು ಪ್ರತಿ ವರ್ಷ ಅಗಸ್ಟ್ ತಿಂಗಳ ಮೊದಲ ವಾರದಲ್ಲೇ ಬಿಡುಗಡೆ ಮಾಡುವ ನಿರ್ಧಾರ ಬಜೆಟ್ ನಲ್ಲೇ ಪ್ರಕಟಿಸಬೇಕು, ಇದಕ್ಕಾಗಿ ವಿಶೇಷ ನಿಯಮಾವಳಿ ಜಾರಿ ಮಾಡಬೇಕು. ಯಾವುದೇ ಸರ್ಕಾರ ಬಂದರೂ ಈ ನಿಯಮ ಪಾಲನೆಯಾಗುವ ಕಾನೂನು ರಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.










