ಕರ್ನಾಟಕ ಏಕೀಕರಣಕ್ಕೆ ಕಿತ್ತೂರು ಕರ್ನಾಟಕದ ಕೊಡುಗೆ ಅವಿಸ್ಮರಣೀಯ : ಲಕ್ಷ್ಮೀ ಹೆಬ್ಬಾಳಕರ್
- Shivaraj Bandigi
- 9 Jan 2024 , 8:45 AM
- Dharwad
- 381
ಧಾರವಾಡ : ಕರ್ನಾಟಕ ಏಕೀಕರಣಕ್ಕೆ ಕಿತ್ತೂರು ಕರ್ನಾಟಕದ ಕೊಡುಗೆ ಅವಿಸ್ಮರಣೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅವರು ಬುಧವಾರ, ಧಾರವಾಡದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಇವರ ವತಿಯಿಂದ ನಡೆದ 68ನೇ ಕರ್ನಾಟಕ ರಾಜ್ಯೋತ್ಸವ “ ಕರ್ನಾಟಕ ಸಂಭ್ರಮ - ೫೦ ” ರ ಸಂಭ್ರಮದಲ್ಲಿ ಪಾಲ್ಗೊಂಡು ಕಿತ್ತೂರು ಇತಿಹಾಸ ಸಂಶೋಧಕರಾದ ಲಿಂ.ದೊಡ್ಡಭಾವೆಪ್ಪ ಚನ್ನಬಸಪ್ಪ ಮೂಗಿಯವರ ಸ್ಮರಣಾರ್ಥ ದತ್ತಿ ಉದ್ಘಾಟನೆ ಮತ್ತು ‘ ದೊಡ್ಡಭಾವೆಪ್ಪ ಚ. ಮೂಗಿ ’ ಒಂದು ಐತಿಹಾಸಿಕ ದೃಷ್ಟಿ ಎನ್ನುವ ಕೃತಿ ಬಿಡುಗಡೆಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಬೆಳಗಾವಿ, ಧಾರವಾಡ, ಗದಗ ಮೊದಲಾದ ಪ್ರದೇಶಗಳು ಕನ್ನಡ ನಾಡನ್ನು ಒಗ್ಗೂಡಿಸುವ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವು ಎಂದು ಅವರು ಸ್ಮರಿಸಿದರು.
ದೊಡ್ಡ ಭಾವೆಪ್ಪ ಮೂಗಿ ಅವರು ಕಿತ್ತೂರಿನ ಇತಿಹಾಸವನ್ನು ದಾಖಲಿಸದಿದ್ದಲ್ಲಿ ನಮಗೆಲ್ಲ ಚನ್ನಮ್ಮನ ಇತಿಹಾಸ ಇಷ್ಟೊಂದು ಪರಿಪೂರ್ಣವಾಗಿ ಸಿಗುತ್ತಿರಲಿಲ್ಲ. ಯಾವ ಸೌಲಭ್ಯಗಳೂ ಇರದಿದ್ದ ಕಾಲದಲ್ಲಿ ಅವರ ಸಾಧನೆ ಮೆಚ್ಚುವಂತದ್ದು ಎಂದು ಹೆಬ್ಬಾಳಕರ್ ಹೇಳಿದರು.
ನಾವೆಲ್ಲ ಚನ್ನಮ್ಮನ ಇತಿಹಾಸದಿಂದ ಸ್ಫೂರ್ತಿ ಪಡೆದು ಬೆಳೆದವರು. ಹೆಚ್ಚು ಶಿಕ್ಷಣ ಪಡೆಯುವ ಅವಕಾಶ ಇರದಿದ್ದರೂ ನಂತರದಲ್ಲಿ ಓದಿ, ಕೇಳಿ ಒಂದಿಷ್ಟು ತಿಳಿದುಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಪಶ್ಚಿಮ ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಹೋರಾಟದ ಮೂಲಕವೇ ಬೆಳೆದವರು. ಅವರ ಹೋರಾಟ ನಮಗೆಲ್ಲ ಕಿಚ್ಚು ಹಚ್ಚುವಂತಿದೆ. ಅವರು ಹೊಸ ಚನ್ನಮ್ಮ ಎನಿಸಿಕೊಂಡಿದ್ದಾರೆ. ಬೆಳಗಾವಿಯ ಏಕೈಕ ಗಂಡು ಮಗ ಎಂದರೆ ಲಕ್ಷ್ಮೀ ಹೆಬ್ಬಾಳಕರ್ ಎಂದರು.
ವಿರೋಧ ಪಕ್ಷದಲ್ಲಿದ್ದರೂ ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ ಇರುವ ಚನ್ನಮ್ಮನ ಗುಣಗಳಿಂದಾಗಿ ನಾವು ಅವರನ್ನು ಮೆಚ್ಚುತ್ತೇವೆ ಎಂದು ಬೆಲ್ಲದ ಹೇಳಿದರು.
ಬೈಲಹೊಂಗಲ ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ, ಮಹೇಶ ಚನ್ನಂಗಿ, ಸವಿತಾ ಎಸ್ ಮೂಗಿ(ದೇಶಮುಖ್) ಚಂದ್ರಕಾಂತ ಗು ಬೆಲ್ಲದ, ಡಾ. ಎಸ್. ಆರ್. ಗುಂಜಾಳ, ಶಂಕರ ಕುಂಬಿ, ಡಾ. ಶೈಲಜಾ ಅಮರಶೆಟ್ಟಿ, ಶಂಕರ ಹಲಗತ್ತಿ, ಸಂಘದ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.










