ಹಚ್ಚೇವು ಕನ್ನಡದ ದೀಪ ಮೂಲಕ ಕೆಎಲ್ಇಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ
- 15 Jan 2024 , 3:07 AM
- Belagavi
- 692
ಬೆಳಗಾವಿ :ಕೆ.ಎಲ್.ಇ. ವಿಶ್ವವಿದ್ಯಾಲಯದಿಂದ ಕನ್ನಡ ಗೀತೆಗಳ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಯು ಕರೆನೀಡಿದ್ದ ‘ನನ್ನ ನಾಡು - ನನ್ನ ಹಾಡು’ ಅಭಿಯಾನದ ‘ಕೋಟಿ ಕಂಠ ಗಾಯನ’ ಸಮೂಹ ನಾಡಗೀತೆ ಕಾರ್ಯಕ್ರಮದ ನಿಮಿತ್ಯ ಕೆಎಲ್ಇ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು. ಕೆಎಲ್ಇ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿ ಇತಿಹಾಸ ಪರಂಪರೆ ಸಾರುವ ಗೀತೆಗಳ ಗಾಯನವು ಕೇಳುಗರ ಕಣ್ಮನ ಸೆಳೆದವು.

ಗೀತಗಾಯನ ಅಭಿಯಾನದಲ್ಲಿ ಕುವೆಂಪು ಅವರು ರಚಿಸಿದ ನಾಡಗೀತೆ ಹಾಗೂ ಬಾರಿಸು ಕನ್ನಡ ಡಿಂಡಿಂವಾ, ಹುಯಿಲಗೋಳ ನಾರಾಯಣರಾಯರ ಉದಯವಾಗಲೀ ನಮ್ಮ ಚೆಲುವ ಕನ್ನಡ ನಾಡು, ಡಾ. ಡಿ ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ನಾಡೋಜ ಡಾ. ಚೆನ್ನವೀರ ಕಣವಿ ಅವರ ವಿಶ್ವವಿನೂತನ ವಿದ್ಯಾಚೇತನ, ಡಾ. ಹಂಸಲೇಖಾ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡುಗಳನ್ನು ಹಾಡುವದರ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕೆಎಲ್ಇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗೌರವ ಅತಿಥಿಗಳಾಗಿ ಕೆಎಲ್ಇ ವಿಶ್ವವಿದ್ಯಾಲಯ ಕುಲಪತಿ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್.ಎಸ್.ಮಹಾಂತಶೆಟ್ಟಿ, ಕೆಎಲ್ಇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿ. ಎ. ಕೋಠಿವಾಲೆ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಯುಎಸ್ಎಂ-ಕೆಎಲ್ಇ ನಿರ್ದೇಶಕರಾದ ಡಾ. ಹೆಚ್. ಬಿ. ರಾಜಶೇಖರ, ಕೆಎಲ್ಇ ಆಸ್ಪತ್ರೆಗಳ ಹೊಸ ಯೋಜನೆಗಳ ನಿರ್ದೇಶಕರಾದ ಡಾ. ವಿ. ಡಿ. ಪಾಟೀಲ ಹಾಗೂ ಕೆ.ಎಲ್.ಇ. ವಿಶ್ವವಿದ್ಯಾಲಯದ ಎಲ್ಲಾ ಅಂಗಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
ಕನ್ನಡ ಬಳಗದ ಕಾರ್ಯಾಧ್ಯಕ್ಷರಾದ ಡಾ. ಅವಿನಾಶ ಕವಿ ಅವರು ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ. ಸ್ನೇಹಾ ರಾಜೂರಿಕರ, ಡಾ. ಸುನಿತಾ ಪಾಟೀಲ, ದುರ್ಗಾ ನಾಡಕರ್ಣಿ, ಜಿತೇಂದ್ರ ಸಾಬಣ್ಣವರ, ಯಾದವೇಂದ್ರ ಪ್ರಜಾರಿ, ರಾಹುಲ ಮಂಡೂಲ್ಕರ, ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಕನ್ನಡ ಬಳಗದ ವಿದ್ಯಾರ್ಥಿಗಳು, ಕೆಎಲ್ಇ ಹಂಚಿನಾಳ ಪ್ರಾಥಮಿಕ ಶಾಲೆ, ಜಿಎ ಹೈಸ್ಕೂಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಎಂ ಪಿ ಎಚ್ ಮಕ್ಕಳು ಸ್ಭೆರಿದಂತೆ ಸುಮಾರು 300ಕ್ಕೂ ಅಧಿಕ ಹಾಡುಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










