ಮಹಾರಾಷ್ಟ್ರದ ಜಲದ್ರೋಹ: ಕರ್ನಾಟಕದ ಮೇಲೆ ನೀರಿನ ದೌರ್ಜನ್ಯ:ಪ್ರವಾಹದ ಎಚ್ಚರಿಕೆ ಕೊಟ್ಟ ಅಶೋಕ್ ಚಂದರಗಿ
- krishna shinde
- 27 May 2024 , 8:15 AM
- Belagavi
- 1793
ಬೆಳಗಾವಿ:ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಸಮರ್ಪಕ ನಿರ್ವಹಣೆ ಮಾಡದ ಪರಿಣಾಮ, ಕರ್ನಾಟಕಕ್ಕೆ ಹರಿದು ಬರುತ್ತಿದ್ದ ನೀರಿಗೆ ತಡೆಯೊಡ್ಡುವ ಮೂಲಕ ಮಹಾರಾಷ್ಟ್ರ ಸರ್ಕಾರ ತನ್ನ ಜಲದ್ರೋಹದ ಚಟುವಟಿಕೆಗಳನ್ನು ಮುಂದುವರೆಸಿದೆ.
ಇದರಿಂದಾಗಿ ಕರ್ನಾಟಕದ ಜನತೆ ತೀವ್ರ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವಕ್ಕೆ ತುತ್ತಾಗಿರುವ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲ್ಬುರ್ಗಿ ಮುಂತಾದ ಉತ್ತರ ಕರ್ನಾಟಕದ ಜಿಲ್ಲೆಗಳು, ಮಹಾರಾಷ್ಟ್ರದ ಕೊಯ್ನಾ ಮತ್ತು ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ಬಿಡಲಾಗುವ ನೀರಿನಿಂದ ಮಾತ್ರ ಬಾಳಲು ಸಾಧ್ಯವಾಗುತ್ತದೆ.
ಆದರೆ, 2016 ರಿಂದ ಮಹಾರಾಷ್ಟ್ರವು ಈ ನೀರನ್ನು ಬಿಡಲು ನಿರಾಕರಿಸುತ್ತಿದೆ.ನೀರು ವಿನಿಮಯ ಒಪ್ಪಂದಕ್ಕೆ ಪಟ್ಟು ಹಿಡಿದು, ಕರ್ನಾಟಕದ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತಿದೆ. ಮಹಾರಾಷ್ಟ್ರವು ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ, ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿಗೆ ನೀರು ಪೂರೈಸಬೇಕೆಂದು ಪಟ್ಟು ಹಿಡಿದಿದ್ದು, ಕರ್ನಾಟಕಕ್ಕೆ ತೀವ್ರ ಅವಾಂತರ ಉಂಟುಮಾಡುತ್ತಿದೆ.
3700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಯೋಜನೆಯ ನೀರು, ಮಹಾರಾಷ್ಟ್ರಕ್ಕೆ ಪೂರೈಸುವ ನೆಪದಲ್ಲಿ, ಕರ್ನಾಟಕವನ್ನು ಮತ್ತೆ ವಂಚಿಸುವ ಮಹಾರಾಷ್ಟ್ರದ ಯತ್ನವಾಗಿದೆ. 2019 ರಲ್ಲಿ ಮಹಾರಾಷ್ಟ್ರವು, ಕರ್ನಾಟಕಕ್ಕೆ ಕೇಳದೆ, ಅಪಾರ ಪ್ರಮಾಣದ 8 ಲಕ್ಷಕ್ಕೂ ಅಧಿಕ ಟಿಎಂಸಿ ನೀರನ್ನು ಬಿಡುಗಡೆ ಮಾಡಿ, 35 ಸಾವಿರ ಕೋಟಿ ರೂ. ಹಾನಿ ಉಂಟುಮಾಡಿತ್ತು.
ಈ ಹಾನಿಯ ಭಾರವನ್ನು ಮಹಾರಾಷ್ಟ್ರವೇ ಭರಿಸಬೇಕೆಂದು ಕರ್ನಾಟಕದ ಜನರು ಆಗ್ರಹಿಸುತ್ತಿದ್ದಾರೆ. ಈಗ ಮಹಾರಾಷ್ಟ್ರ, ರಾಜಾಪುರ ಬ್ಯಾರೇಜ್ ಗೇಟುಗಳನ್ನು ಬಂದ್ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಪ್ರವಾಹದ ಪರಿಸ್ಥಿತಿಯನ್ನು ಉಂಟುಮಾಡಲು ತಯಾರಾಗಿದೆ.
ಇದು ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮತ್ತೊಮ್ಮೆ 2019 ರ ಪರಿಸ್ಥಿತಿಯನ್ನು ಮುಂದೂಡಬಹುದು. ಕರ್ನಾಟಕ ಸರ್ಕಾರವು ತಕ್ಷಣವೇ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಬೇಕಾಗಿದೆ.
ಅಶೋಕ ಚಂದರಗಿ ನೀರಾವರಿ ಹೋರಾಟಗಾರರು ಮತ್ತು ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ