ಸಣ್ಣ ಸಣ್ಣ ಕ್ಷಣಗಳನ್ನು ಸಂಭ್ರಮಿಸಲು ರೂಢಿಸಿಕೊಳ್ಳಬೇಕು -ಚನ್ನರಾಜ ಹಟ್ಟಿಹೊಳಿ
- 14 Jan 2024 , 3:28 AM
- Belagavi
- 113
ಬೆಳಗಾವಿ:ಮನುಷ್ಯರಾದ ನಾವು ಸಣ್ಣ ಸಣ್ಣ ಕ್ಷಣಗಳನ್ನು ಸಂಭ್ರಮಿಸಲು ರೂಢಿಸಿಕೊಳ್ಳಬೇಕು, ಸಣ್ಣ ಪುಟ್ಟ ಮನಸ್ತಾಪಗಳು, ವಿವಾದಗಳನ್ನು ಬದಿಗಿಟ್ಟು ಜೀವನದಲ್ಲಿ ಒಳ್ಳೆಯದನ್ನು ಕಾಣಲು ಬಯಸಬೇಕು ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಮಹಾಂತೇಶ ನಗರ ರಹವಾಸಿಗಳ ಸಂಘದ ವತಿಯಿಂದ ಸೋಮವಾರ ಸಂಜೆ, 50ನೇ ವರ್ಷದ ಗಣೇಶ ಉತ್ಸವದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳಿಯಿಂದ ಮಠಾಧೀಶರು, ಯೋಧರು ಹಾಗೂ ಗಣ್ಯ ವ್ಯಕ್ತಿಗಳ ಸನ್ಮಾನ ಕಾರ್ಯಕ್ರಮ, ಹಾಸ್ಯ ಮತ್ತು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖದಲ್ಲಿ ನಗುವಿದ್ದರೆ ಮುಖದ ಸೌಂದರ್ಯದ ಜೊತೆ ಮನಸ್ಸಿನ ನೆಮ್ಮದಿ ಸಹ ಅಧಿಕವಾಗುತ್ತದೆ. ಇದೇ ರೀತಿ ನಮ್ಮ ಮುಖದಲ್ಲಿ ಸಣ್ಣ ನಗುವಿದ್ದರೆ ನಮ್ಮ ಸುತ್ತಮುತ್ತಲಿನ ವಾತಾವರಣ ನೆಮ್ಮದಿಯಾಗಿರುತ್ತದೆ. ಜೀವನದಲ್ಲಿ ನಗುವಿದ್ದರೆ ಒಳ್ಳೆಯ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು, ನಗು ಉತ್ತಮವಾದ ಆರೋಗ್ಯಕ್ಕೆ ಔಷಧಿಯಾಗಿದೆ. ಈ ಜೀವನ ಮೂರು ದಿನದ ಸಂತೆಯಾಗಿದ್ದು, ಇದ್ದಷ್ಟು ಕಾಲ ನಗುವಿನೊಂದಿಗೆ ಇರೋಣ, ಇತರರನ್ನು ಖುಷಿ ಪಡಿಸೋಣ. ಎಂದು ಅವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಅನಿಲ ಬೆನಕೆ, ಚಿತ್ರನಟ ಅಭಿಲಾಶ, ಮಹಾಂತೇಶ ನಗರದ ಮುಖಂಡರು, ಉಮೇಶ ಆಚಾರ್ಯ, ರಾಜು ಶೇಠ್, ಮದನಕುಮಾರ ಭೈರಪ್ಪನವರ, ಗಣೇಶ ಉತ್ಸವ ಮಂಡಳಿಯ ಪದಾಧಿಕಾರಿಗಳು, ಮಹಾಂತೇಶ ನಗರದ ರಹವಾಸಿಗಳು, ಹಾಸ್ಯ ಕಲಾವಿದರು, ಗಾಯಕರು ಹಾಗೂ ಮುಂತಾದವರು ಉಪಸ್ಥಿತರಿದ್ದರು.










