ಬೆಳಗಾವಿ-ಕಿತ್ತೂರು ರೈಲುಮಾರ್ಗ-ಭೂಸ್ವಾಧೀನ ಆರಂಭಿಸಲು ಸಚಿವ ಗೋವಿಂದ್ ಕಾರಜೋಳ ಸೂಚನೆ
- 15 Jan 2024 , 3:47 AM
- Belagavi
- 275
ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರ್ ರಾಷ್ಟ್ರೀಯ ದರ್ಜೆಗೆ ಮೇಲ್ದರ್ಜೆಗೇರಿಸಲು ಅಂದಾಜು 100 ಎಕರೆ ಜಮೀನು ಅಗತ್ಯವಿದೆ. ಈ ಜಮೀನನ್ನು ಒದಗಿಸಲು ಸರಕಾರದ ವತಿಯಿಂದ ಕ್ರಮವನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ವಿಮಾನ ನಿಲ್ದಾಣ, ರೈಲ್ವೆ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅವಶ್ಯಕವಿರುವ ಸುತ್ತಮುತ್ತಲಿನ ಜಮೀನು ವ್ಯವಹಾರ ನಿರ್ಬಂಧಿಸಲು ಸೂಕ್ತ ಕ್ರಮ ವಹಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದರಿಂದ ಮುಂಬರುವ ದಿನಗಳಲ್ಲಿ ವಿಮಾನ ಮೇಲ್ದರ್ಜೆಗೆ ಏರಿಸಲು ಅಗತ್ಯವಿರುವ ಜಮೀನು ಪಡೆಯಲು ಅನುಕೂಲವಾಗಲಿದೆ ಎಂದರು. ಬೆಳಗಾವಿ-ಕಿತ್ತೂರು ರೈಲುಮಾರ್ಗ ನಿರ್ಮಾಣ ಕ್ಕೆ ಅಗತ್ಯವಿರುವ 600 ಎಕರೆ ಭೂಸ್ವಾಧೀನಕ್ಕೆ ಅಗತ್ಯವಿರುವ ಪ್ರಕ್ರಿಯೆಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು. ಕೆ.ಐ.ಎ.ಡಿ.ಬಿ. ವತಿಯಿಂದ ಭೂಸ್ವಾಧೀನ ಅಧಿಸೂಚನೆ ಪ್ರಕಟಿಸಬೇಕು ಎಂದು ತಿಳಿಸಿದರು.
ಮಂಡಳಿಯ ಸಿಇಓ ಜತೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ವಾರದೊಳಗೆ ಗೆಜೆಟ್ ಅಧಿಸೂಚನೆ ಪ್ರಕಟಿಸಲು ತಿಳಿಸಿದರು. ಅಲ್ಲದೆ, ಭೂಸ್ವಾಧೀನಕ್ಕೆ ಅಗತ್ಯವಿರುವ 35 ಕೋಟಿ ರೂಪಾಯಿ ಅನುದಾನದ ಪ್ರಸ್ತಾವನೆಗೆ ತಕ್ಷಣವೇ ಮಂಜೂರಾತಿ ನೀಡಿ ಕಳಿಸಬೇಕು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೂ ಕೂಡ ದೂರವಾಣಿ ಮೂಲಕವೇ ನಿರ್ದೇಶನ ನೀಡಿದರು.










