ಖಾನಾಪೂರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

ಪಶ್ಚಿಮಘಟ್ಟಗಳಲ್ಲಿರುವ ಗ್ರಾಮಗಳಿಗೆ ಮೂಲ ಭೂತ ಸೌಕರ್ಯ ಒದಗಿಸಲು ಕ್ರಮ

promotions

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಭೀತಿಯಲ್ಲಿರುವ ಖಾನಾಪೂರ ತಾಲೂಕಿನ ಮಲಪ್ರಭಾ ಬ್ರಿಡ್ಜ್ ಮತ್ತು ರುಮೇವಾಡಿ ಬ್ಯಾರೇಜ್ ವೀಕ್ಷಿಸಿ, ಪ್ರವಾಹದಿಂದ ನಾಶವಾಗಿರುವ ಮನೆ, ಬೆಳೆ ಹಾಗೂ ಬ್ರಿಡ್ಜ್ ಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

promotions

ಖಾನಾಪೂರ ತಾಲೂಕಿನ ಪಶ್ಚಿಮಘಟ್ಟಗಳ ಪ್ರದೇಶದಲ್ಲಿರುವ ಗುಡ್ಡದ ಮಧ್ಯೆಯದಲ್ಲಿರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಮಳೆಯಿಂದ ಜೀವಹಾನಿಯಾಗದಂತೆ ಕ್ರಮಕೈಗೊಳ್ಳಲಾಗುವುದು. ಅರಣ್ಯ‌ ಇಲಾಖೆಯ ಕಠಿಣ ನಿಲುವುಗಳಿಂದ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದರು. 

 ಮನೆ ಬಿದ್ದ ತಕ್ಷಣ 1.20 ಲಕ್ಷ ರೂಪಾಯಿ ಹಣ, ಜೊತೆಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.80 ಲಕ್ಷ ಹಣ ನೀಡಲಾಗುತ್ತಿದ್ದು, ಭಾಗಶಃ ಬಿದ್ದ ಮನೆಗೆ ನೀಡಲಾಗುತ್ತಿರುವ ಮೊತ್ತವನ್ನು 10 ಸಾವಿರ‌ ರೂಪಾಯಿಂದ 50 ಸಾವಿರ ರೂಪಾಯಿಗೆ ಏರಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. 

ಮಳೆಗಾಲದ ವೇಳೆ ಬೆಳಗಾವಿ - ಗೋವಾ ನಡುವಿನ ಮುಖ್ಯ ರಸ್ತೆ ಜಾಮ್ ಆಗುತ್ತಿದ್ದು, ಶೀಘ್ರವೇ ಗೋವಾ ಮುಖ್ಯ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, 100 ಕೋಟಿ ವೆಚ್ಚದಲ್ಲಿ ಹಟ್ಟಿಹೊಳಿ ಬ್ರಿಡ್ಜ್ ನಿರ್ಮಾಣವಾಗಲಿದೆ ಎಂದು‌ ಹೇಳಿದರು. 

 ಬಿಜೆಪಿಯವರ ಪಾದಯಾತ್ರೆಗೆ ಶುಭವಾಗಲಿ 

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪಾದಯಾತ್ರೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಶುಭಾಶಯಗಳು, ಮಳೆ ಬರುತ್ತಿರುವ ಕಾರಣ ಒಳ್ಳೆಯ ಶೂ, ರೈನ್ ಕೋಟ್ ತೆಗೆದುಕೊಂಡು ಹೋಗಲಿ ಎಂದು ಸಚಿವರು ಹೇಳಿದರು. 

ಈ ವೇಳೆ ಸ್ಥಳೀಯ ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್, ನೀರಾವರಿ ಹಾಗೂ ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Read More Articles