ಹೋಂ ಸ್ಟೇಗಳಿಗೆ ತೊಂದರೆ ಆಗದಂತೆ ಸಚಿವರಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಮನವಿ
- Shivaraj Bandigi
- 15 Jan 2024 , 3:46 AM
- Koppal
- 171
ಬೆಂಗಳೂರು : ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಂಪಿ ಹಾಗೂ ಆನೆಗೊಂದಿ ಭಾಗದಲ್ಲಿ ಇರುವ ಹೋಂ ಸ್ಟೇಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರು ಮನವಿ ಮಾಡಿದ್ದಾರೆ.

ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಬೆಂಗಳೂರಿನಲ್ಲಿ ಸಚಿವ ಹೆಚ್ ಕೆ ಪಾಟೀಲರನ್ನು ಬೇಟಿ ಮಾಡಿ ಅತಂತ್ರ ಬದುಕನ್ನು ರೂಪಿಸಿಕೊಂಡು ಹೋಂ ಸ್ಟೇಗಳನ್ನು ನಡೆಸುತ್ತಿರುವ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ವಿಶ್ವ ವಿಖ್ಯಾತ ಹಂಪಿ, ಅಂಜನಾದ್ರಿ ಬೆಟ್ಟ, ಆನೆಗೊಂದಿ ಅರಮನೆ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಲು ಹಾಗೂ ನಮ್ಮ ಭಾರತೀಯ ಪರಂಪರೆಯನ್ನು ಅರಿಯಲು ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಇಂತಹ ಪ್ರವಾಸಿಗರಿಗೆ ಊಟ ಹಾಗೂ ವಸತಿ ಯನ್ನು ನೀಡಿ ಅತಿಥಿ ಸತ್ಕಾರ ವನ್ನು ಮಾಡುತ್ತಿವೆ. ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಹೋಂ ಸ್ಟೇಗಳನ್ನು ನಡೆಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿವೆ. ವಿಶೇಷವಾಗಿ ಆನೆಗೊಂದಿ ಭಾಗದ ಹಳ್ಳಿಗಳಲ್ಲಿ ಅವರದೇ ಸ್ವಂತ ಭೂಮಿಯಲ್ಲಿ ಹೋಂ ಸ್ಟೇ ಕಟ್ಟಡಗಳನ್ನು ಶಾಶ್ವತ ಅಲ್ಲದ ರೀತಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ಮಾಡಿಕೊಂಡಿದ್ದಾರೆ.
ಈ ಮೂಲಕ ದೇಶ ವಿದೇಶಗಳಿಂದ ಬರುವಂತಹ ಪ್ರವಾಸಿಗರಿಗೆ ತುಂಬಾ ಸ್ನೇಹ ಪೂರ್ವಕವಾಗಿ ನಡೆದುಕೊಂಡು ವಿದೇಶಿಗರಿಗೆ ನಮ್ಮ ಭಾರತೀಯ ಪರಂಪರೆಯನ್ನು ತಿಳಿಸುವ ಪ್ರಯತ್ನವನ್ನು ಈ ಹೋಂ ಸ್ಟೇ ನಡೆಸುವ ಕುಟುಂಬಗಳು ಮಾಡುತ್ತಿವೆ.
ಭಾರತೀಯ ಪರಂಪರೆಯನ್ನು ಎತ್ತಿಹಿಡಿಯುವ ಹೋಂ ಸ್ಟೇಗಳು ಇದೀಗ ಅತಂತ್ರತೆಯನ್ನು ಎದುರಿಸುತ್ತಿವೆ ಹಾಗೂ ಕಷ್ಟದ ದಿನಗಳನ್ನು ಅನುಭವಿಸುತ್ತವೆ. ಈ ವಿಷಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಗಮನಕ್ಕೆ ಬಂದ ತಕ್ಷಣ, ಶಾಸಕರು ಸಚಿವ ಹೆಚ್ ಕೆ ಪಾಟೀಲರನ್ನು ಭೇಟಿ ಮಾಡಿ ಅತಂತ್ರೆಯನ್ನು ನಿವಾರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದರೆ.
ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಮನವಿಗೆ ಸ್ಪಂದಿಸಿದ ಸಚಿವ ಹೆಚ್ ಕೆ ಪಾಟೀಲರು ಸಮಸ್ಯೆ ಇತ್ಯರ್ಥಕ್ಕೆ ಶೀಘ್ರದಲ್ಲೇ ಉನ್ನತ ಅಧಿಕಾರಿಗಳ ಸಭೆಯನ್ನು ನಿಗದಿ ಪಡಿಸಲು ಸೂಚಿಸಿದ್ದಾರೆ.
ಈ ಮೂಲಕ ಸಚಿವರು ಅತಂತ್ರ ಬದುಕು ನಡೆಸುತ್ತಿರುವ ಹೋಂ ಸ್ಟೇ ನಡೆಸುವ ಕುಟುಂಬಗಳಿಗೆ ಅಭಯ ನೀಡಿದ್ದಾರೆ.










