ಭಾನುವಾರವೂ ನಿಲ್ಲದ ಜನಪ್ರವಾಹ : ತಾಳ್ಮೆಯಿಂದಲೇ ಅಹವಾಲು ಆಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
- Shivaraj Bandigi
- 14 Jan 2024 , 8:02 PM
- Belagavi
- 182
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿಯ ಗೃಹ ಕಚೇರಿಯಲ್ಲಿ ಭಾನುವಾರವೂ ಸಾರ್ವಜನಿಕರ ಅಹವಾಲು ಆಲಿಸಿದರು.

ಸಚಿವರಾದಾಗನಿಂದಲೂ ಅವರ ಬಳಿ ವಿವಿಧ ಸಮಸ್ಯೆ, ಬೇಡಿಕೆಗಳನ್ನು ಹೊತ್ತ ಜನಪ್ರವಾಹವೇ ಹರಿದುಬರುತ್ತಿದೆ. ಅದರಲ್ಲೂ ಬೆಳಗಾವಿಯಲ್ಲಿದ್ದಾಗಲಂತೂ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಸಾರ್ವಜನಿಕರನ್ನು ಭೇಟಿಯಾಗಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ.

ಕೇವಲ ಬೆಳಗಾವಿ ಗ್ರಾಮೀಣ ಕ್ಷೇತ್ರ ಮಾತ್ರವಲ್ಲದೆ, ಬೇರೆ ಬೇರೆ ಭಾಗಳಿಂದಲೂ ಅಪಾರ ಸಂಖ್ಯೆಯಲ್ಲಿ ವಿವಿಧ ಇಲಾಖೆಗಳ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಹೊತ್ತು ಜನರು ಬರುತ್ತಿದ್ದಾರೆ.
ಮಹಿಳೆಯರು, ಮಕ್ಕಳು, ಯುವಕರು, ವೃದ್ದರು, ವಿಶೇಷ ಚೇತನರು ಸೇರಿದಂತೆ ಎಲ್ಲ ವರ್ಗದ ಜನರು ಅಹವಾಲು ಸಲ್ಲಿಸಲು ಆಗಮಿಸುತ್ತಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೂ ಅವಿಶ್ರಾಂತವಾಗಿ, ಊಟವನ್ನೂ ಮಾಡದೆ ಅಹವಾಲುಗಳನ್ನು ಆಲಿಸಿದ ಲಕ್ಷ್ಮೀ ಹೆಬ್ಬಾಳಕರ್, ಮತ್ತೆ ಊಟ ಮುಗಿಸಿ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಅಹವಾಲು ಸ್ವೀಕರಿಸಿದರು. ಭಾನುವಾರ ಬೆಳಗ್ಗೆಯಿಂದಲೇ ಜನಪ್ರವಾಹ ಸಚಿವರ ಕಚೇರಿಯೆಡೆಗೆ ಹರಿದುಬಂದಿತ್ತು.
ಎಲ್ಲರೊಂದಿಗೆ ತಾಳ್ಮೆಯಿಂದಲೇ ಪ್ರೀತಿಯಿಂದ ಮಾತನಾಡುತ್ತ ಅವರ ನೋವು, ಬೇಡಿಕೆಗಳಿಗೆ ಸಚಿವರು ಸ್ಪಂದಿಸಿದರು. ಬಹುತೇಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.










