ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದ್ದು: ಹುಕ್ಕೇರಿ ಶ್ರೀಗಳು
- 7 Jan 2024 , 4:25 AM
- Belagavi
- 117
ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿವೆ. ನಾವೆಲ್ಲರೂ ನೆಮ್ಮದಿಯಿಂದ ಇದ್ದವೆ ಎಂದರೆ ನಮ್ಮನ್ನು ಕಾಯುವ ಯೋಧರಿಂದ ಎಂದು ಅರ್ಥ ಮಾಡಿಕೊಳ್ಳಬೇಕು. ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು ಎನ್ನುವ ಮನೋಭಾವದಿಂದ ಎಲ್ಲರೂ ಬದುಕುವ ಅವಶ್ಯಕತೆ ಇದೆ ಎಂದು ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಭಾನುವಾರ ಅವರು ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಇಡೀ ದೇಶದಲ್ಲಿ ಎಲ್ಲರೂ ಸಂತೋಷದಿಂದ ಆಚರಿಸುತ್ತಿದ್ದಾರೆ. ಇದು ಅಭಿಮಾನದ ಸಂಗತಿ. ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನು ಏನು ಮಾಡಿದೆ ಎನ್ನುವುದು ಮುಖ್ಯ. ಎಲ್ಲರೂ ದೇಶ ಭಕ್ತರಾಗುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸೋಣ. ಇವತ್ತು ಜಾತಿ, ಮತ, ಪಂಗಡ ಎಲ್ಲವನ್ನೂ ಮೀರಿ ನಾವೇಲ್ಲರೂ ಭಾರತೀಯರು ಎನ್ನುವ ಮನೋಭಾವದಿಂದ ಎಲ್ಲರೂ ಬದಕುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.

ದೇಶಕ್ಕಾಗಿ ಎಲ್ಲರೂ ಮುಂದೆ ನಿಲ್ಲಬೇಕು. ದೇಶಕ್ಕೆ ಆಪತ್ತು ಬಂದಾಗ ಒಗ್ಗಟ್ಟಿನಿಂದ ಎಲ್ಲರೂ ವಿರೋಧಿಸಬೇಕು. ಅಂದಾಗ ಮಾತ್ರ ದೇಶಕ್ಕೆ ಭವಿಷ್ಯ ಇದೆ ಎಂದರು.
ಈ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿ ಹಿರೇಮಠದ ಉತ್ತರಾಧಿಕಾರಿಯಾದ ಶ್ರೀ ರೇಣುಕಗಡದೇಶ್ವರ ದೇವರು, ಕರ್ನಾಟಕ ಆಗಮ ಪಂಡಿತರಾದ ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು, ಚಂದರಗಿಯ ಗಂಗಾಧರಯ್ಯ ಹಿರೇಮಠ, ಸದಾಶಿವ ಹಿರೇಮಠ, ಮಹಾಂತೇಶ ಶಾಸ್ತ್ರೀ, ಚಿಕ್ಕೋಡಿಯ ಚೇತನಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










