ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನ ಸ್ಮರಿಸಬೇಕು: ಕಡಬೂರ
- 15 Aug 2022 , 12:45 PM
- Belagavi
- 102
ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಆಚರಿಸುತ್ತಿರುವ ನಾವು ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಮಾಡಿರುವ ತ್ಯಾಗ-ಬಲಿದಾನವನ್ನು ಸ್ಮರಿಸಬೇಕಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹೇಳಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದ ವಾರ್ತಾಭವನ ಆವರಣದಲ್ಲಿ ಸೋಮವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮನೆಮಠಗಳನ್ನು ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ಲಕ್ಷಾಂತರ ಜನರ ತ್ಯಾಗದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಬ್ರಿಟಿಷರ ಗುಂಡೇಟಿಗೆ ಪ್ರಾಣತೆತ್ತ ಮಕ್ಕಳು,ಯುವಕರು ಹಾಗೂ ದೇಶಕ್ಕಾಗಿ ನಗುನಗುತ ನೇಣುಗಂಬವೇರಿದ ಜನರ ಬಲಿದಾನ ಸದಾ ನೆನಪಿನಲ್ಲಿ ಇಟ್ಟುಕೊಂಡು ಸಮೃದ್ಧ ಹಾಗೂ ಸಶಕ್ತ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಯಾದ ಅನಂತ ಪಪ್ಪು, ಎಂ.ಎಲ್.ಜಮಾದಾರ, ಎಂಸಿಎ ಶಾಖಾ ವ್ಯವಸ್ಥಾಪಕ ರಾಜೇಶ್ ಕೋರಿಶೆಟ್ಟಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.










