ಫೆ.26 ರಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ

ಬೆಂಗಳೂರು: ಯುವಕರಿಗೆ ಉದ್ಯೋಗ ದೊರಕಿಸುವ ಸಲುವಾಗಿ ರಾಜ್ಯಸರ್ಕಾರದಿಂದ ಯುವ ಸಮೃದ್ಧಿ ಹೆಸರಿನಲ್ಲಿ ಬೃಹತ್ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಫೆ.26, 27 ರಂದು ಆಯೋಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ವಿಧಾನಸೌಧದಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಬೃಹತ್ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು.

promotions

ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸರ್ಕಾರದಿಂದ ಉದ್ಯೋಗ ಮೇಳ ನಡೆಸಲಾಗಿತ್ತು. ಅದರ ನಂತರ ನಡೆಯುತ್ತಿರುವ ಅತೀ ದೊಡ್ಡ ಬೃಹತ್ ಉದ್ಯೋಗ ಮೇಳ ಇದಾಗಿದ್ದು, ಇದುವರೆಗೂ 31 ಸಾವಿರ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಒಂದು ಲಕ್ಷ ಉದ್ಯೋಗಗಳು ಲಭ್ಯವಿದೆ ಎಂದು ತಿಳಿಸಿವೆ ಎಂದರು.

promotions

600 ಕ್ಕೂ ಹೆಚ್ಚು ಸ್ಟಾಲ್‍ಗಳನ್ನು ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ದೇಶದಲ್ಲೇ ಅತೀ ದೊಡ್ಡ ಪ್ರಮಾಣದ ಉದ್ಯೋಗ ಮೇಳವನ್ನು ನಮ್ಮ ಸರ್ಕಾರ ಆಯೋಜಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮೇಳದಲ್ಲಿ ಉದ್ಯೋಗ ಸಿಗದೇ ಇದ್ದವರಿಗೆ ಅಗತ್ಯವಾದಂತಹ ಕೌಶಲ್ಯ ಹಾಗೂ ವೃತ್ತಿ ತರಬೇತಿ ನೀಡಲಾಗುವುದು. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡುವುದು, ಉದ್ಯೋಗ ದೊರೆಯುವವರೆಗೂ ನಿಗಾ ವಹಿಸಲಾಗುವುದು. ಇದಕ್ಕಾಗಿ ಉದ್ಯೋಗ ಮೇಳ ಸಹಾಯವಾಣಿಯನ್ನು ಆರಂಭಿಸಲಾಗಿದೆ. 18005999918 ಈ ಸಂಖ್ಯೆಗೆ ಅಭ್ಯರ್ಥಿಗಳು ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಸುಮಾರು 60 ರಿಂದ 70 ಸಾವಿರ ಜನ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮೆಜೆಸ್ಟಿಕ್ ಮತ್ತು ಶಾಂತಿನಗರದಿಂದ ಉದ್ಯೋಗ ಮೇಳದವರೆಗೂ 10 ವಿಶೇಷ ಬಸ್‍ಗಳನ್ನು ಒದಗಿಸಲಾಗಿದ್ದು, ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯೋಗ ಮೇಳಕ್ಕೆ ಆಗಮಿಸುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿ ಹೆಚ್ಚಾಗಿದೆ. 40 ಸಾವಿರ ಉದ್ಯೋಗಗಳು ನಷ್ಟವಾಗಿವೆ. ಕೇಂದ್ರ ಸರ್ಕಾರ ನಡೆಸುತ್ತಿದ್ದ ಎನ್‍ಎಸ್‍ಒ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಏಕಾಏಕಿ ನಿಲ್ಲಿಸಿ ಉದ್ಯೋಗ ನಷ್ಟದ ಮಾಹಿತಿಯನ್ನು ಜನರಿಂದ ಮರೆಮಾಚುತ್ತಿದೆ ಎಂದರು. ಚುನಾವಣೆಗೂ ಮೊದಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದರು. 10 ವರ್ಷ ಆಡಳಿತದಲ್ಲಿ ಒಟ್ಟು 20 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಆದರೆ ಉದ್ಯೋಗ ಸೃಷ್ಟಿಗಿಂತಲೂ ನಷ್ಟವೇ ಹೆಚ್ಚಾಗಿದೆ ಎಂದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಯಲ್ಲಿ 10 ಸಾವಿರ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಆರಂಭಗೊಂಡಿದ್ದವು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಯಲ್ಲಿ ಇದು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗಿಲ್ಲ. ಕೌಶಲ್ಯ ಯೋಜನೆಯಿಂದ ಶೇ.17 ರಷ್ಟು ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ವಿವರಿಸಿದರು.

Read More Articles