
ಬೀದಿನಾಯಿ ಹುಡುಕಿಕೊಡುವಂತೆ ಎಫ್ಐಆರ್ ಹಾಕಿದ ಮಹಿಳೆ
ಬೆಂಗಳೂರು: ಸಾಮಾನ್ಯವಾಗಿ ಮನೆಯಲ್ಲಿ ಸಾಕು ನಾಯಿ ಕಳೆದುಹೋದರೆ ದೂರು ದಾಖಲು ಮಾಡುವುದು ಕಾಮನ್, ಆದರೆ ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ಡಾ. ಪುನೀತಾ ರಂಗಸ್ವಾಮಿ ಎಂಬುವರು ಬೀದಿ ನಾಯಿ ಕಾಣೆಯಾಗಿದೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅನಿಲ್ ಎಂಬುವರು ನಾಯಿಗೆ ಹಿಂಸೆ ನೀಡಿ, ಎಲ್ಲೋ ಬಿಟ್ಟು ಬಂದಿದ್ದಾರೆ. ಅಲ್ಲದೇ ಬೀದಿ ನಾಯಿಗೆ ಹಿಂಸೆ ನೀಡಿ ಬೇರೆ ಕಡೆ ಬಿಟ್ಟು ಬಂದಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೆಚ್.ಆರ್.ಬಿ.ಆರ್ ಲೇಔಟ್ನ ಎರಡನೇ ಬ್ಲಾಕ್ನಲ್ಲಿದ್ದ ೭ ತಿಂಗಳ ನಾಯಿಗೆ ದೂರುದಾರೆ ಪುನೀತಾ ರಂಗಸ್ವಾಮಿ ಅವರು ನಿತ್ಯ ಊಟ ಹಾಕುತ್ತಿದ್ದರು. ಹೀಗಾಗಿ, ನಿಯತ್ತಿನ ನಾಯಿ ಪುನೀತಾ ಅವರ ಮನೆ ಮುಂದೆ ಕಾವಲಾಗಿ ಇರುತ್ತಿತ್ತು. ೨೦೨೫ರ ಡಿಸೆಂಬರ್ ೧೪ರಂದು ನಾಯಿ ಬಿಸ್ಕೆಟ್ ಹಾಗೂ ನೀರು ಕುಡಿದು ಮನೆಯ ಮುಂದೆ ಮಲಗಿತ್ತು. ಆದರೆ, ಡಿಸೆಂಬರ್ ೧೫ರ ಬೆಳಿಗ್ಗೆಯಿಂದ ನಾಯಿ ಕಾಣೆಯಾಗಿದೆ.
ನಾಯಿ ಎಲ್ಲಿ ಹೋಯ್ತು ಅಂತ ತಿಳಿಯಲು ಅನಿಲ್ ಅವರ ಬಳಿ ಪುನೀತಾ ಅವರು ಡಿಸೆಂಬರ್ ೧೪ರ ರಾತ್ರಿ ೧೧ ಗಂಟೆಯಿoದ ೧೫ರ ಮಧ್ಯಾಹ್ನ ೧೨ ಗಂಟೆವರೆಗಿನ ಸಿಸಿಟಿವಿ ದೃಶ್ಯಾವಳಿ ಕೇಳಿದ್ದಾರೆ. ಆದರೆ, ಅನಿಲ್ ಸಿಸಿಟಿವಿ ದೃಶ್ಯ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಅನಿಲ್ ಮೇಲೆ ಅನುಮಾನವಿದೆ. ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದಾರೆoದು ದೂರಿನಲ್ಲಿ ದಾಖಲಿಸಿದ್ದಾರೆ. ಅಲ್ಲದೇ, ಕಾಣೆಯಾದ ನಾಯಿಯ ತಾಯಿ ಕೂಡ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಇದ್ದಕ್ಕಿದಂತೆ ನಾಪತ್ತೆಯಾಗಿತ್ತು.
ಈಗ ಮರಿ ಕೂಡ ಕಾಣೆಯಾಗಿದೆ. ಇನ್ನೂ ಮೂರು ಬೀದಿ ನಾಯಿಗಳಿದ್ದು ಏನಾದರೂ ಆಗುತ್ತೆ ಎಂಬ ಭಯವಿದೆ. ಹೀಗಾಗಿ, ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪುನೀತಾ ಒತ್ತಾಯಿಸಿದ್ದಾರೆ.