ಸೆ.17 ರಂದು ಯೋಗಥಾನ ಕಾರ್ಯಕ್ರಮ: ಪೂರ್ವ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
- 14 Jan 2024 , 11:02 PM
- Belagavi
- 147
ಬೆಳಗಾವಿ:ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ 17 ರಂದು ಬೆಳಗಾವಿಯ ಆರ್ಮಿ ಎನ್ವಿರಾನ್ಮೆಂಟ್ ಪಾರ್ಕ್ ಟ್ರೈನಿಂಗ್ ಸೆಂಟರ್ ನಲ್ಲಿ "ಯೋಗಥಾನ್" ಕಾರ್ಯಕ್ರಮ ಆಯೋಜಿಸಲಾಗಿದ್ದು, ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.23) ನಡೆದ ಜಿಲ್ಲೆಯಲ್ಲಿ ಯೋಗಥಾನ್ ಕಾರ್ಯಕ್ರಮ ಏರ್ಪಡಿಸುವ ಕುರಿತು "ಯೋಗಥಾನ್"-2022ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎನ್.ಸಿ.ಸಿ, ಎನ್.ಎಸ್.ಎಸ್, ಮಿಲಿಟರಿ ಯೋಧರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ, ನರೇಗಾ ಕಾರ್ಮಿಕರು ಹಾಗೂ ಇತರೆ ಯೋಗ ಸಂಸ್ಥೆಗಳು ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಅನ್ ಲೈನ್ ಮೂಲಕ 1 ಲಕ್ಷ 22 ಸಾವಿರ ನೋಂದಣಿಗಳಾಗಿವೆ. ಅದರಲ್ಲಿ ಬೆಳಗಾವಿ ಶೈಕ್ಷಣಿಕ ಕ್ಷೇತ್ರದಿಂದ 42 ಸಾವಿರ ಹಾಗೂ ಚಿಕ್ಕೋಡಿ ಭಾಗದಿಂದ 30 ಸಾವಿರ ವಿದ್ಯಾರ್ಥಿಗಳು ಸೇರದಂತೆ ಸುಮಾರು 80 ಸಾವಿರ ಶಾಲಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಿನೇಶ್ವರ್ ಪಡನಾಡ ಅವರು ವಿವರಿಸಿದರು.
ಕ್ಯೂ.ಆರ್ ಕೋಡ್ ಸ್ಕ್ಯಾನ್ ಮೂಲಕ ಪ್ರವೇಶ:
ಈಗಾಗಲೇ ನೋಂದಣಿ ಮಾಡಿಕೊಂಡ ಸಂಸ್ಥೆಗಳು, ಅಭ್ಯರ್ಥಿಗಳ ಪ್ರವೇಶಕ್ಕೆ ಕ್ಯೂ.ಆರ್ ಕೋಡ್ ನೀಡಲಾಗುವದು. ಶಾಲಾ, ಕಾಲೇಜು ಹಾಗೂ ಸಂಸ್ಥೆಗಳಿಗೆ ನೀಡಿರುವ ಕ್ಯೂ.ಆರ್ ಕೋಡ್ ಮೂಲಕ 300 ಜನ ಪ್ರವೇಶ ಪಡೆಯಬಹುದು.
ಅದೇ ರೀತಿಯಲ್ಲಿ ವೈಯಕ್ತಿಕವಾಗಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೀಡಿರುವ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮೂಲಕ ಒಬ್ಬರಿಗೆ ಒಂದು ಬಾರಿ ಮಾತ್ರ ಪ್ರವೇಶ ಸಿಗಲಿದೆ. ನೋಂದಾಯಿತರಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಗಿನ್ನಿಸ್ ರಿಕಾರ್ಡ್ ಲಿಮಿಟೆಡ್ ರಿಪ್ರೆಸೆಂಟೇಟಿವ್ ಶೈಲಜಾ ಶ್ರೀಕಾಂತ ಅವರು ಹೇಳಿದರು.
ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಲು ಗಿನ್ನಿಸ್ ದಾಖಲೆ ಲಿಮಿಟೆಡ್ ವತಿಯಿಂದ ಸ್ಕ್ಯಾನಿಂಗ್ ಟೀಮ್ ಬರಲಿದೆ. ಕಾರ್ಯಕ್ರಮದ ಸ್ಪರ್ಧೆಗಳನ್ನು ಆಯುಷ್ ಟಿವಿ ಚಾನಲ್ ನಿಂದ ವಿಡಿಯೋಗ್ರಾಫಿ ಹಾಗೂ ಫೋಟೋಗ್ರಾಫಿ ದಾಖಲೆಗಳನ್ನು ಸಂಗ್ರಹಿಸಲಾಗುವುದು. ಅದೇ ರೀತಿ ಸ್ಪರ್ಧಿಗಳ ಅಭ್ಯಾಸದ ದೃಷ್ಟಿಯಿಂದ ಈಗಾಗಲೇ ಆಯುಷ್ ಟಿವಿಯಲ್ಲಿ ಪ್ರತಿದಿನ ಬೆಳಿಗ್ಗೆ 6.30 ರಿಂದ 7 ಗಂಟೆಯವರೆಗೆ ಯೋಗ ತರಬೇತಿ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ.
"ಯೋಗಥಾನ್" ಕಾರ್ಯಕ್ರಮದ ಗಿನ್ನಿಸ್ ದಾಖಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುವುದು ಎಂದು ಗಿನ್ನಿಸ್ ರಿಕಾರ್ಡ್ ಲಿಮಿಟೆಡ್ ರಿಪ್ರೆಸೆಂಟೇಟಿವ್ ಶೈಲಜಾ ಶ್ರೀಕಾಂತ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವವರಿಗೆ ಬಸ್ ಗಳ ವ್ಯವಸ್ಥೆ, ಇ-ಟಾಯ್ಲೆಟ್, ಶಾಲಾ ಕಾಲೇಜು ಆವರಣದಲ್ಲಿ ಪಾರ್ಕಿಂಗ್, ಅಲ್ಪೋಪಹಾರ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮದಲ್ಲಿ ಆಹಾರ ಪದಾರ್ಥಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚನೆ ನೀಡಬೇಕು. ತುರ್ತು ಸೇವೆಗಳಾದ ಅಗ್ನಿಶಾಮಕ, ಆಂಬ್ಯುಲೆನ್ಸ್, ಹಾಗೂ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್. ಹೆಚ್ ವಿ, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಸಂಜಯ ಡುಮ್ಮಗೊಳ, ಆಯುಷ್ ಇಲಾಖೆಯ ಅಧಿಕಾರಿ ಶ್ರೀಕಾಂತ ಸುಣಧೋಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ, ಕಾಲೇಜು ಮುಖ್ಯಸ್ಥರು ಹಾಗೂ ಎನ್.ಎಸ್.ಎಸ್ - ಎನ್.ಸಿ.ಸಿ ವಿಭಾಗಗಳ ಸಂಯೋಜಿಕರು ಸಭೆಯಲ್ಲಿ ಉಪಸ್ಥಿತರಿದ್ದರು.










