
ರಾಜ್ಯದ ಶಾಲೆಗಳಲ್ಲಿ ನಾಡಹಬ್ಬ ಮತ್ತು ರಾಷ್ಟ್ರೀಯ ಹಬ್ಬದಂದು ಬಿಸಿಯೂಟ ಕಡ್ಡಾಯ: ಸರ್ಕಾರದ ಆದೇಶ
ಬೆಂಗಳೂರು:ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಷ್ಟ್ರೀಯ ಹಾಗೂ ನಾಡಹಬ್ಬಗಳಂದು ಬಿಸಿಯೂಟ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.ಈ ಸಂಬoಧ ಶಾಲಾ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ನಿರ್ದೇಶಕರು ಸುತ್ತೋಲೆಯನ್ನು ರಾಜ್ಯ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಹೊರಡಿಸಿದ್ದಾರೆ.

ಪ್ರತಿ ವರ್ಷದಂತೆ ಪಿ ಎಂ ಪೋಷಣ್ (ಮಧ್ಯಾಹ್ನ ಬಿಸಿಯೂಟ ಯೋಜನೆ) ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಲೆಕ್ಕಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ನಾಡಹಬ್ಬಗಳನ್ನು(ಕನ್ನಡ ರಾಜ್ಯೋತ್ಸವ) ಶಾಲಾ ಕೆಲಸದ ದಿನಗಳೆಂದು ಪರಿಗಣಿಸಲಾಗಿದೆ. ಅಲ್ಲದೇ ಪಿಎಂ ಪೋಷಣ್ ಯೋಜನೆಯ ಡಿಯಲ್ಲಿ ಬಿಸಿಯೂಟ ಯೋಜನೆಯನ್ನು ಅನುಷ್ಠಾನ ಮಾಡಲು (ಯೋಜನಾ ಅನುಮೋದನಾ ಮಂಡಳಿ) ಪಿಎಬಿ ಯಿಂದ ಅನುಮೋದನೆಯನ್ನು ಪಡೆಯಲಾಗಿರುತ್ತದೆ ಎಂದಿದ್ದಾರೆ.

ಆದ್ದರಿಂದ ಎಲ್ಲಾ ರಾಷ್ಟ್ರೀಯ ಹಾಗೂ ನಾಡಹಬ್ಬಗಳಂದು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಬಿಸಿಯೂಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕು.
ಆದ್ದರಿಂದ 2025 ಜನವರಿ 26 ಗಣರಾಜ್ಯೋತ್ಸವ ದಿನದಂದು ಎಲ್ಲಾ ಶಾಲೆಗಳಲ್ಲಿ ಪಿ ಎಂ ಪೋಷಣ್ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ತಿಳಿಸಿದ್ದಾರೆ.