
ಬೆಂಗಳೂರಿನಲ್ಲಿ ಅಧಿಕಾರಿ ಆತ್ಮಹತ್ಯೆ: ಡೆತ್ ನೋಟ್ ಪತ್ತೆ – ನಿಗೂಢತೆಯ ಬೆನ್ನುಹತ್ತಿದ ಪೊಲೀಸರು
ಬೆಂಗಳೂರು:ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDSL) ಸಂಸ್ಥೆಯಲ್ಲಿ ಖರೀದಿ ವಿಭಾಗದ ಅಧಿಕಾರಿ ಆಗಿದ್ದ ಅಮೃತ್ ಶಿರೂರ್ (40) ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮುನೇಶ್ವರ ಬ್ಲಾಕ್ನಲ್ಲಿ ತಮ್ಮ ಬಾಡಿಗೆ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮೃತ್ ಶಿರೂರ್ ಅವರು 10 ವರ್ಷಗಳಿಂದ ಕೆಎಸ್ಡಿಎಲ್ನಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 28 ರಂದು ಸಂಜೆ ಅವರು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮನೆಯ ಮಾಲೀಕ ಗಿರೀಶ್ ಅವರು ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಘಟನಾ ಸ್ಥಳದಲ್ಲಿ ಅಮೃತ್ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಪೋಷಕರಿಗೆ ಒಳ್ಳೆಯ ಮಗನಾಗಲಿಲ್ಲ. ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ನನ್ನ ಸಾವಿಗೆ ನನ್ನೇ ಹೊಣೆ ಎಂಬುದಾಗಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ವೈವಾಹಿಕ ಜೀವನದ ಸಂಕಷ್ಟ:ಅಮೃತ್ ಅವರು ಎರಡು ಬಾರಿ ಮದುವೆಯಾಗಿದ್ದರು. ಮೊದಲ ಮದುವೆ ಪ್ರೇಮ ವಿವಾಹವಾಗಿದ್ದು, ಕೆಲವೇ ತಿಂಗಳಲ್ಲಿ ವಿಚ್ಛೇದನಕ್ಕೆ ಕಾರಣವಾಯಿತು. 2019ರಲ್ಲಿ ಅವರ ಎರಡನೇ ಮದುವೆ ನಡೆದರೂ, ದಂಪತಿಯ ನಡುವಿನ ಮನಸ್ತಾಪದಿಂದ ವಿವಾಹ ಬದುಕು ನಿಶ್ಚಲವಾಗಿತ್ತು. ಎರಡನೇ ವಿವಾಹವೂ ವಿಚ್ಛೇದನ ಹಂತದಲ್ಲಿದ್ದ ಕಾರಣ, ಅಮೃತ್ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು.
ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ವರದಿ:
ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಕೌಟುಂಬಿಕ ಅಸಮಾಧಾನದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.